ಪಠ್ಯ ಪುಸ್ತಕ ಎಂಬ ಮಿಂಚಿನ ಬಳ್ಳಿ
[Nataraj Huliyar]
ನಮ್ಮ ಬೋಧನಾ ವಲಯದಲ್ಲಿ ಎಂಥೆಂಥ ಜಡ ಮನಸ್ಸುಗಳು ನುಸುಳಿವೆ ಎಂಬುದನ್ನು ನೋಡುತ್ತಿದ್ದರೆ ನಿಜಕ್ಕೂ ಆತಂಕವಾಗುತ್ತದೆ. ಕಾಲೇಜುಗಳಿಗೆ ಶೇಕ್ಸಪಿಯರ್ ನಾಟಕವನ್ನೋ ನಾಟಕ ಭಾಗವನ್ನೋ ಪಠ್ಯವನ್ನಾಗಿಸಿದರೆ, ಈ ಕಾಲದಲ್ಲಿ ಶೇಕ್್ಸಪಿಯರ್ ಅಪ್ರಸ್ತುತ ಎನ್ನುವ ನವ ಪಂಡಿತೋತ್ತಮರಿದ್ದಾರೆ! ಲಂಕೇಶ್ ಅವರ ‘ಮುಟ್ಟಿಸಿಕೊಂಡವನು’ ಎಂಬ ಪರಿಣಾಮಕಾರಿ ಕತೆಯನ್ನಿಟ್ಟರೆ, ಅದು ವಿವಾದವುಂಟು ಮಾಡುತ್ತದೆ ಎಂದು ರಾಗ ಎಳೆಯುವ ಅಧ್ಯಾಪಕರಿದ್ದಾರೆ. ಕನ್ನಡ ಕವಿಗಳ ಅನುವಾದಗಳನ್ನು ಇಂಗ್ಲಿಷ್ ಪಠ್ಯದಲ್ಲಿಟ್ಟರೆ, ಅನುವಾದಗಳು ಬೇಡ ಎನ್ನುವವರಿದ್ದಾರೆ; ಹೀಗೆನ್ನುವವರು ನಾವು ಓದುತ್ತಿರುವ ರಷ್ಯನ್ ಹಾಗೂ ಫ್ರೆಂಚ್ ಪಠ್ಯಗಳೆಲ್ಲ ಇಂಗ್ಲಿಷಿಗೆ ಅನುವಾದಗೊಂಡವು ಎಂಬ ಬಗ್ಗೆ ಜಾಣ ಮರೆವು ತೋರುತ್ತಾರೆ; ಹೊಸ ಲೇಖಕಿಯೊಬ್ಬರ ಒಳ್ಳೆಯ ಕತೆಯನ್ನು ಪಠ್ಯದಲ್ಲಿ ಸೇರಿಸಿ ಎಂದರೆ ‘ಅವರ ಬಗ್ಗೆ ನೋಟ್ಸ್ ಸಿಗುವುದಿಲ್ಲ, ಬೇಡ’ ಎನ್ನುವವರಿದ್ದಾರೆ!
ಈಚೆಗೆ ಬಂದಿರುವ ಪಿಯುಸಿ ಹೊಸ ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಶೇಕ್ಸಪಿಯರನ ‘ರೋಮಿಯೋ ಜೂಲಿಯೆಟ್’ ನಾಟಕದ ಎರಡು ಕೋಮಲ ಭಾಗಗಳಿವೆ. ಅಧ್ಯಾಪಕರೊಬ್ಬರು ‘ಈ ಪ್ರೀತಿಯ ಸ್ವಗತಗಳನ್ನು ಹದಿಹರೆಯದ ಹುಡುಗ ಹುಡುಗಿಯರಿಗೆ ಹೇಗೆ ಪಾಠ ಮಾಡುವುದು?’ ಎಂದು ಆತಂಕದಿಂದ ಕೇಳಿದಾಗ ಅಚ್ಚರಿಯಾಯಿತು. ಜೀವನ ಪ್ರೀತಿಯುಳ್ಳ ಎಲ್ಲ ಅಧ್ಯಾಪಕ, ಅಧ್ಯಾಪಕಿಯರೂ ಉತ್ಸಾಹದಿಂದ ಚರ್ಚಿಸಬಲ್ಲ ರಮ್ಯ ಭಾಗವಿದು. ‘ರೋಮಿಯೋ ಜೂಲಿಯೆಟ್’ ನಾಟಕದಲ್ಲಿ ಜೂಲಿಯೆಟ್ಟಳ ಸೌಂದರ್ಯವನ್ನು ಮೊದಲ ಬಾರಿಗೆ ಕಂಡು ನಿಬ್ಬೆರಗಾಗುವ ರೋಮಿಯೋನಲ್ಲಿ ವಿಸ್ಮಯ ಉಕ್ಕುತ್ತದೆ. ಆ ಉತ್ಕಟ ಭಾಗದ ಸರಳ ಅನುವಾದ: ‘ಓಹ್! ಅವಳು ದೀವಟಿಗೆಗಳಿಗೆ ಮತ್ತಷ್ಟು ಉಜ್ವಲವಾಗಿ ಬೆಳಗುವುದನ್ನು ಕಲಿಸುವಳು; ಅವಳು ಇರುಳ ಕೆನ್ನೆಯ ಮೇಲೆ ತೂಗುವಳು- ಇಥಿಯೋಪಿಯಾದ ಕರಿಯನ ಕಿವಿಯ ಶ್ರೀಮಂತ ಒಡವೆಯ ಹಾಗೆ; ಈ ಲೋಕದ ಬಳಕೆಗಲ್ಲ ಅವಳ ಚೆಲುವು; ಕಾಗೆಗಳ ನಡುವೆ ಬಿಳಿ ಪಾರಿವಾಳ ಮಿಂಚುವ ಹಾಗೆ ಅವಳು ಆ ಹೆಂಗಳೆಯರ ನಡುವೆ ಮಿಂಚುವಳು; ಅವಳ ನಾಟ್ಯ ಮುಗಿದ ಮೇಲೆ ಅವಳು ನಿಂತ ತಾಣವನು ದಿಟ್ಟಿಸುವೆನು; ಅವಳ ಕೈ ಮುಟ್ಟಿ ನನ್ನೀ ಒರಟು ಕೈಗಳನು ಹರಸಿಕೊಳ್ಳುವೆನು. ಈ ತನಕ ಈ ಹೃದಯ ಪ್ರೀತಿಸಿತ್ತೇ? ದೃಷ್ಟಿಯೇ! ಅದನ್ನೆಲ್ಲ ತೊರೆದುಬಿಡು! ಈ ರಾತ್ರಿಯ ತನಕ ಅಸಲಿ ಚೆಲುವನ್ನು ನಾ ಕಂಡಿರಲಿಲ್ಲ!’
ಆನಂತರ ರೋಮಿಯೋ, ಜೂಲಿಯೆಟ್ ನಡುವೆ ಪ್ರೀತಿ ಮೊಳೆಯುತ್ತದೆ. ಮುಂದಿನ ದೃಶ್ಯವೊಂದರಲ್ಲಿ ಜೂಲಿಯೆಟ್ ಉತ್ಕಟವಾಗಿ ರಾತ್ರಿಯನ್ನು ಬೇಡಿಕೊಳ್ಳುತ್ತಾಳೆ: ‘ಬಾ ಕೋಮಲ ರಾತ್ರಿಯೆ ಬಾ; ಬಾ ರೋಮಿಯೋ ಬಾ; ಬಾ ರಾತ್ರಿಯ ಹಗಲೆ ಬಾ. ಕಾಗೆಯ ಮೇಲೆ ಹರಡಿದ ಹಿಮಕ್ಕಿಂತ ಬಿಳುಪಾಗಿ ಇರುಳ ರೆಕ್ಕೆಯ ಮೇಲೆ ರೋಮಿಯೋ ನೀ ಬರುವೆ; ಬಾ ಕೋಮಲ ರಾತ್ರಿಯೇ ಬಾ; ಬಾ ಕರಿ ಹುಬ್ಬಿನ ರಾತ್ರಿಯೆ ಬಾ; ನನಗೆ ನನ್ನ ರೋಮಿಯೋ ಕೊಡು; ಅವನು ಸತ್ತಾಗ ಅವನನ್ನು ಪುಟ್ಟ ತಾರೆಗಳಂತೆ ಕತ್ತರಿಸು; ಆಗ ಅವನು ಸ್ವರ್ಗದ ಮುಖವನು ಫಳಫಳ ಹೊಳೆವಂತೆ ಮಾಡುವನು; ಆಗ ಜಗವೆಲ್ಲ ರಾತ್ರಿಯನು ರಮಿಸುವುದು; ಕಣ್ಣು ಕುಕ್ಕುವ ಆ ಸೂರ್ಯನನು ಪೂಜಿಸುವುದ ಕೈಬಿಡುವುದು...’
ಓದಿದಾಗ, ಅಭಿನಯಿಸಿದಾಗ ಎಲ್ಲ ಜೀವಂತ ಮನುಷ್ಯರೂ ತೀವ್ರವಾಗಿ ಮಿಡಿಯುವ ಭಾಗಗಳಿವು. ಇದರ ಬಗ್ಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಏನು ಹೇಳಬಹುದೆಂಬ ಕುತೂಹಲ ನನಗಿತ್ತು. ಅವರಲ್ಲಿ ಅನೇಕರು ಈ ವರ್ಣನೆಯನ್ನು ಓದಿ ಪುಳಕಗೊಂಡಿದ್ದರು. ಇಲ್ಲೇ ಇನ್ನೊಂದು ಘಟನೆಯನ್ನೂ ಹೇಳಿಬಿಡಬೇಕು. ನಾವು ಈ ಪಠ್ಯಕ್ಕೆ ಬರಹಗಳನ್ನು ಆಯ್ಕೆ ಮಾಡುತ್ತಿರುವಾಗ, ಅದೇ ಆಗ ಮೊದಲ ಪಿಯುಸಿ ಮುಗಿಸಿದ್ದ ವಿದ್ಯಾರ್ಥಿನಿಯೊಬ್ಬಳು ಎರಡನೆಯ ಪಿಯುಸಿಗೆ ಯಾವ ಪಠ್ಯವನ್ನು ಆಯ್ಕೆ ಮಾಡುತ್ತಾರೋ ಎಂಬ ಕುತೂಹಲದಿಂದ ಅಲ್ಲಿಗೆ ಬಂದಳು. ಈಗಾಗಲೇ ಆ ಹುಡುಗಿ ಓದಿದ್ದ ಮೊದಲ ಪಿಯುಸಿ ಪಠ್ಯದ ಬಗ್ಗೆ ನಾವು ಅವಳ ಅಭಿಪ್ರಾಯ ಕೇಳಿದಾಗ ಅವಳು ಥಟ್ಟನೆ ಕೊಟ್ಟ ಉತ್ತರ: ‘ಪುಸ್ತಕದ ಮೊದಲ ಎರಡು ಮೂರು ಪಾಠಗಳಲ್ಲಿ ನಮ್ಮನ್ನು ಬರೀ ಅಳಿಸುತ್ತೀರಿ. ನಮ್ಮನ್ನು ಚಿಯರಪ್ ಮಾಡುವ ಪಠ್ಯಗಳು ಕೂಡ ನಮಗೆ ಬೇಕು.’
ಪಠ್ಯಪುಸ್ತಕ ರೂಪಿಸುವವರು ಸೂಕ್ಷ್ಮ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮಾತುಗಳನ್ನು ಕೇಳಿಸಿಕೊಳ್ಳುವುದು ತುಂಬಾ ಮುಖ್ಯ ಎಂಬುದನ್ನು ಈ ಪ್ರತಿಕ್ರಿಯೆ ಸೂಚಿಸುತ್ತದೆ. ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಂತಮ್ಮ ವಯಸ್ಸಿಗೆ ತಕ್ಕಂತೆ ಸ್ಪಂದಿಸಬಲ್ಲ ಬರಹಗಳೂ ಇರಬೇಕೆಂಬುದು ನಮಗೆಲ್ಲ ಮತ್ತೆ ಖಾತ್ರಿಯಾಗತೊಡಗಿತು. ಪಠ್ಯಪುಸ್ತಕಗಳನ್ನು ಮಾಡುವವರು ವಿದ್ಯಾರ್ಥಿಗಳೂ ಬೋಧಕರೂ ತೊಡಗಿ ಬೆಳೆಸಬಲ್ಲ ಕೃತಿಗಳನ್ನು ಆಯ್ಕೆ ಮಾಡುವ ಬಗ್ಗೆ ಸರಿಯಾಗಿ ಯೋಚಿಸುವಂತೆ ಕಾಣುವುದಿಲ್ಲ. ಸಾಹಿತ್ಯ ಪಠ್ಯವೆಂದರೆ ವಿವಿಧ ಸ್ವರ ಮೇಳಗಳ ಆರ್ಕೆಸ್ಟ್ರಾದಂತೆ; ಅಲ್ಲಿ ಮಕ್ಕಳನ್ನು ಬದುಕಿಗೆ ಅಣಿಗೊಳಿಸಬಲ್ಲ ಲೇಖನಗಳು ಬೇಕು; ಮಾನವ ವರ್ತನೆಗಳನ್ನು, ಸಮಾಜವನ್ನು ಗ್ರಹಿಸುವ ಕತೆಗಳು ಬೇಕು; ಭಾಷೆಯ ಅನಂತ ಸಾಧ್ಯತೆಗಳನ್ನು ಹೇಳಿಕೊಡುವ ಪದ್ಯಗಳು ಬೇಕು. ಹೀಗೆ ಅನೇಕ ಬಗೆಯ ಅಗತ್ಯಗಳು ಸಾಹಿತ್ಯದ ಪಠ್ಯಕ್ಕಿರುತ್ತವೆ.
ಆದ್ದರಿಂದಲೇ ಕ್ಲಾಸ್ ರೂಮಿನಲ್ಲಿ ಒಂದು ಪಠ್ಯಪುಸ್ತಕದ ಬಗೆಬಗೆಯ ಪಾಠಗಳನ್ನು ಹೇಳಿಕೊಡುವವರು ಹಲಬಗೆಯಲ್ಲಿ ಪರಕಾಯ ಪ್ರವೇಶಗಳನ್ನು ಮಾಡುತ್ತಿರಬೇಕಾಗುತ್ತದೆ. ಕೆಲವು ಬಗೆಯ ಪಠ್ಯಗಳನ್ನಾದರೂ ತೀವ್ರವಾಗಿ ಅನುಭವಿಸುತ್ತಿರಬೇಕಾಗುತ್ತದೆ. ತಾವು ಬೋಧಿಸುವ ಪಠ್ಯವನ್ನು ಪ್ರೀತಿಸಲಾರದವರು ವಿದ್ಯಾರ್ಥಿಗಳನ್ನೂ ತರಗತಿಗಳನ್ನೂ ಮಂಕಾಗಿಸುತ್ತಿರುತ್ತಾರೆ. ಅಷ್ಟೇ ಅಲ್ಲ, ಪಠ್ಯಗಳನ್ನು ಆಯ್ಕೆ ಮಾಡುವವರ ಪೂರ್ವಗ್ರಹಗಳು ಕೂಡ ಪಠ್ಯಪುಸ್ತಕಗಳನ್ನು ಜಡಗೊಳಿಸುತ್ತವೆ. ಈಚೆಗೆ ಒಂದು ಪಠ್ಯಪುಸ್ತಕ ಸಮಿತಿಯಲ್ಲಿ ಲಂಕೇಶ ಅವರ ‘ಮುಟ್ಟಿಸಿಕೊಂಡವನು’ ಕತೆಯನ್ನು ಕೆಲವರು ಸೂಚಿಸಿದರೆ, ಅದು ವಿವಾದ ಸೃಷ್ಟಿಸುತ್ತದೆ ಎಂದು ಕೆಲವರು ಹಾರಾಡತೊಡಗಿದರು. ಈ ಕತೆಯಲ್ಲಿ ಲಿಂಗಾಯತ ಜಾತಿಯ ಬಸಲಿಂಗ ತನ್ನ ಎಡಗಣ್ಣಿಗೆ ತೊಂದರೆಯಾದಾಗ ತಿಮ್ಮಪ್ಪ ಎಂಬ ದಲಿತ ಡಾಕ್ಟರ ಬಳಿ ಹೋಗುತ್ತಾನೆ. ಅವನ ಕಣ್ಣಿನ ಆಪರೇಷನ್ ಆದ ಎರಡು ವಾರ ತಲೆಗೆ ನೀರು ಹಾಕದಿರಲು ಡಾಕ್ಟರು ಹೇಳುತ್ತಾರೆ; ಆದರೆ ಬಸಲಿಂಗನ ಜಾತಿಪೀಡಿತ ಮನಸ್ಸು ಈ ಮಾತನ್ನು ಕೇಳಿಸಿಕೊಳ್ಳದೇ ಹೋಗುತ್ತದೆ; ಅವನು ಮೈಲಿಗೆ ಕಳೆದುಕೊಳ್ಳಲು ಸ್ನಾನ ಮಾಡುತ್ತಾನೆ. ಸೋಂಕು ತಗುಲಿ ಕಣ್ಣು ಕಳೆದುಕೊಳ್ಳುತ್ತಾನೆ. ಮುಂದೆ ಅವನ ಬಲಗಣ್ಣಿಗೂ ತೊಂದರೆಯಾದಾಗ ಯಾವ ಡಾಕ್ಟರ ಬಳಿಯೂ ಅದಕ್ಕೆ ಪರಿಹಾರ ಸಿಗದೆ ಮತ್ತೆ ಅವನು ತಿಮ್ಮಪ್ಪನವರ ಬಳಿಯೇ ಹೋಗಬೇಕಾಗುತ್ತದೆ. ತಿಮ್ಮಪ್ಪ ಮರುಕದಿಂದ ಮತ್ತೊಂದು ಕಣ್ಣಿಗೂ ಆಪರೇಷನ್ ಮಾಡಿ ‘ಈ ಸಲವಾದರೂ ನಾನು ಹೇಳಿದಂತೆ ಮಾಡು, ತಕ್ಷಣ ಸ್ನಾನ ಮಾಡಬೇಡ’ ಎಂದು ಎಚ್ಚರಿಸಿ ಅವನ ಕಣ್ಣನ್ನು ಉಳಿಸುತ್ತಾರೆ. ಅಸ್ಪೃಶ್ಯತೆಯನ್ನು ಆಚರಿಸುವ ಮತಿಹೀನ ಭಾರತ ತನ್ನ ಕಣ್ಣನ್ನೇ ಕಳೆದುಕೊಳ್ಳುವುದನ್ನು ತೀವ್ರವಾಗಿ ಹೇಳುವ ಈ ಕತೆಯನ್ನು ಪಠ್ಯಪುಸ್ತಕದಲ್ಲಿ ಓದಿದ ಎಲ್ಲ ಜಾತಿಯ ಮಕ್ಕಳೂ ಅದರ ಸಂದೇಶವನ್ನು ಗ್ರಹಿಸಿರುವ ಉದಾಹರಣೆಗಳಿವೆ. ಆದರೆ ಮಕ್ಕಳಿಗಿರುವ ಮುಕ್ತತೆ ಮೇಷ್ಟ್ರುಗಳಿಗೆ ಇಲ್ಲದಿರುವುದು ಆತಂಕ ಹುಟ್ಟಿಸುತ್ತದೆ.
ಆದ್ದರಿಂದಲೇ ಮಕ್ಕಳ ಮನಸ್ಸಿನಲ್ಲಿರುವ ಜಾತಿಯ ಕೊಳೆಯನ್ನು ತೊಳೆಯಲೆತ್ನಿಸುವ ‘ಮುಟ್ಟಿಸಿಕೊಂಡವನು’ ಥರದ ಕತೆಯೂ ಪಠ್ಯಪುಸ್ತಕದಲ್ಲಿ ಇರಬೇಕು. ಹಾಗೆಯೇ ಹದಿಹರೆಯದ ಮೀರುವಿಕೆಯನ್ನು ಹಾಗೂ ಮಧುರವಾದ ಮೂಡನ್ನು ಸೃಷ್ಟಿಸುವ ರೋಮಿಯೋ ಜೂಲಿಯೆಟ್ ಸ್ವಗತಗಳ ತೀವ್ರ ಭಾವಗೀತೆಯೂ ಅಲ್ಲಿರಬೇಕು. ಅದರಲ್ಲೂ ಒಬ್ಬರನ್ನೊಬ್ಬರು ದ್ವೇಷಿಸುವ ಎರಡು ಕುಟುಂಬಗಳಿಗೆ ಸೇರಿದ ರೋಮಿಯೋ- ಜೂಲಿಯೆಟ್ ತಮ್ಮ ಮುಗ್ಧ ಪ್ರೀತಿಯಿಂದಲೇ ದ್ವೇಷದ ಗೋಡೆಗಳನ್ನು ದಾಟುವುದರಿಂದ ಈ ಪದ್ಯ ಭಾಗಗಳಿಗೆ ಸಾಮಾಜಿಕ ಮಹತ್ವವೂ ಇದೆ. ಈ ಪಾಠ ಹೇಳುವವರು ಅದನ್ನೂ ಹೇಳಿಕೊಡಬೇಕಾಗುತ್ತದೆ. ಒಂದು ತರಗತಿಯಲ್ಲಿ ಪಾಠ ಮಾಡುವವರು ವಿವಿಧ ಬಗೆಯ ಮೂಡುಗಳನ್ನು ಸೃಷ್ಟಿಸುತ್ತಿರಬೇಕಾಗುತ್ತದೆ. ಹಾಗೆಯೇ ಹುಡುಗ, ಹುಡುಗಿಯರ ಕೈಯಲ್ಲಿರುವ ಪುಸ್ತಕಗಳು ಅವರಲ್ಲಿ ಪ್ರೀತಿ, ಕುತೂಹಲ ಹುಟ್ಟಿಸುವಂತೆ ಆಕರ್ಷಕವಾಗಿ ಇರಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಈ ಸಲದ ಪಿಯುಸಿ ಇಂಗ್ಲಿಷ್ ಪಠ್ಯದಲ್ಲಿ ಖ್ಯಾತ ಕಲಾವಿದ ಪ್ರಕಾಶಬಾಬು ರಚಿಸಿದ ಚಿತ್ರಗಳು, ಹೊಸ ವಿನ್ಯಾಸ ಹಾಗೂ ಮುದ್ರಣ ಎಲ್ಲವೂ ಆಕರ್ಷಕವಾಗಿವೆ. ಕಳೆದ ವರ್ಷ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪದವಿ ತರಗತಿಗಳಿಗಾಗಿ ಹೊರತಂದ ಕನ್ನಡ ಪಠ್ಯಗಳ ಆಯ್ಕೆಯ ವೈವಿಧ್ಯ, ದಕ್ಷತೆ, ವಿನ್ಯಾಸ ಹಾಗೂ ಮುದ್ರಣಗಳ ಸೌಂದರ್ಯ ಕಂಡಾಗ ಕೂಡ ಇಷ್ಟೇ ಆನಂದವಾಗಿತ್ತು. ಪಠ್ಯಪುಸ್ತಕಗಳನ್ನು ಕೈಯಲ್ಲಿ ಹಿಡಿಯಲಾಗದಂತೆ ಮುದ್ರಿಸುವುದು ತಮ್ಮ ಆಜನ್ಮಸಿದ್ಧ ಹಕ್ಕೆಂಬಂತೆ ತಿಳಿದಿರುವ ಸರ್ಕಾರಿ ಸಂಸ್ಥೆಗಳು ಈ ಬಗೆಯ ಪುಸ್ತಕಗಳನ್ನು ಕೊಂಚ ಕಣ್ಣು ಬಿಟ್ಟು ನೋಡಬೇಕು.
ಅದೇ ವೇಳೆಗೆ ಹಲವು ತಲೆಮಾರುಗಳ ಸಂವೇದನೆ, ಅಭಿರುಚಿಗಳನ್ನು ಪೊರೆಯುವ ಪಠ್ಯಗಳನ್ನು ರೂಪಿಸುವವರು ಅತ್ಯಂತ ಜವಾಬ್ದಾರಿಯಿಂದಲೂ ಇರಬೇಕಾಗುತ್ತದೆ. ಹಿಂದೊಮ್ಮೆ ವಿಶ್ವವಿದ್ಯಾಲಯವೊಂದರ ಪಠ್ಯಪುಸ್ತಕಗಳಲ್ಲಿ ಕನ್ನಡದ ಶ್ರೇಷ್ಠ ಲೇಖಕ ಲೇಖಕಿಯರಿಗೂ ಜಾಗವಿರಲಿಲ್ಲ. ಕಾರಣ, ಆಯ್ಕೆ ಸಮಿತಿಯಲ್ಲಿದ್ದವರು ತಮ್ಮ ಬರಹಗಳಿಂದ ಆ ಪಠ್ಯವನ್ನು ತುಂಬಿಸಿಬಿಟ್ಟಿದ್ದರು!
ನಾನೊಂದು ಸಂದರ್ಶನದಲ್ಲಿ ಒಂದು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದ ವಿದ್ಯಾರ್ಥಿಯೊಬ್ಬನನ್ನು ಕನ್ನಡ ಕಾದಂಬರಿ ಪರಂಪರೆಯ ಬಗ್ಗೆ ಕೇಳಿದರೆ, ಆತ ಕಾರಂತ, ಕುವೆಂಪು ಅವರ ಕಾದಂಬರಿಗಳನ್ನೇ ಓದಿರಲಿಲ್ಲ. ಯಾಕೆ ಎಂದರೆ ಅವನ ಉತ್ತರ: ‘ಅವು ನಮ್ಮ ಸಿಲಬಸ್ಸಿನೊಳಗೆ ಇರಲಿಲ್ಲ.’ ಮುಂದೆ ಅಧ್ಯಾಪಕನಾಗಲಿರುವ ಆತ ಕನ್ನಡದ ದೊಡ್ಡ ಲೇಖಕರನ್ನೇ ಓದದಂತೆ ಅವನ ಅಧ್ಯಾಪಕರು ನೋಡಿಕೊಂಡಿದ್ದರು! ಕನ್ನಡದ ಶ್ರೇಷ್ಠ ಲೇಖಕ, ಲೇಖಕಿಯರನ್ನು ಓದದೆ ಕನ್ನಡ ಸಾಹಿತ್ಯದ ಪದವಿ ಪಡೆದವನೊಬ್ಬ ಮುಂದೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಎಂಥ ಅಭಿರುಚಿ ಮೂಡಿಸಬಹುದೆಂಬುದನ್ನು ಸುಲಭವಾಗಿ ಊಹಿಸಬಹುದು.
ನಾನೊಂದು ಸಂದರ್ಶನದಲ್ಲಿ ಒಂದು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದ ವಿದ್ಯಾರ್ಥಿಯೊಬ್ಬನನ್ನು ಕನ್ನಡ ಕಾದಂಬರಿ ಪರಂಪರೆಯ ಬಗ್ಗೆ ಕೇಳಿದರೆ, ಆತ ಕಾರಂತ, ಕುವೆಂಪು ಅವರ ಕಾದಂಬರಿಗಳನ್ನೇ ಓದಿರಲಿಲ್ಲ. ಯಾಕೆ ಎಂದರೆ ಅವನ ಉತ್ತರ: ‘ಅವು ನಮ್ಮ ಸಿಲಬಸ್ಸಿನೊಳಗೆ ಇರಲಿಲ್ಲ.’ ಮುಂದೆ ಅಧ್ಯಾಪಕನಾಗಲಿರುವ ಆತ ಕನ್ನಡದ ದೊಡ್ಡ ಲೇಖಕರನ್ನೇ ಓದದಂತೆ ಅವನ ಅಧ್ಯಾಪಕರು ನೋಡಿಕೊಂಡಿದ್ದರು! ಕನ್ನಡದ ಶ್ರೇಷ್ಠ ಲೇಖಕ, ಲೇಖಕಿಯರನ್ನು ಓದದೆ ಕನ್ನಡ ಸಾಹಿತ್ಯದ ಪದವಿ ಪಡೆದವನೊಬ್ಬ ಮುಂದೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಎಂಥ ಅಭಿರುಚಿ ಮೂಡಿಸಬಹುದೆಂಬುದನ್ನು ಸುಲಭವಾಗಿ ಊಹಿಸಬಹುದು.
ಕೊನೆ ಟಿಪ್ಪಣಿ: ಹುಡುಗ ಹುಡುಗಿಯರ ಮುಗ್ಧತೆ ಮತ್ತು ಮೇಷ್ಟರ ಸಿನಿಕತೆಗೆ ಉದಾಹರಣೆ ಎಂದರೆ, ನಾನು ಬಿ.ಎ. ಓದುತ್ತಿದ್ದಾಗ ಕವಿ ಬೇಂದ್ರೆ ತೀರಿಕೊಂಡರು. ಆಗ ಮಿತ್ರನೊಬ್ಬ ‘ಇದೇನಿದು! ಬೇಂದ್ರೆ ಈಗ ತೀರಿಕೊಂಡರೆ? ಅವರು ನಮ್ಮ ಟೆಕ್ಸ್ಟ್ ಬುಕ್ಕಿನಲ್ಲಿ ಇದ್ದರಲ್ಲ?’ ಎಂದ ಮುಗ್ಧವಾಗಿ. ಇದೇಕೆ ಈ ಪ್ರಶ್ನೆ ಕೇಳುತ್ತಿದ್ದಾನೆ ಎಂದು ನೋಡಿದರೆ, ‘ಅಯ್ಯೋ! ಸಾಮಾನ್ಯವಾಗಿ ಟೆಕ್ಸ್ಟ್ ಬುಕ್ಕಿನಲ್ಲಿ ಇದ್ದವರೆಲ್ಲ ತೀರಿಕೊಂಡಿರುತ್ತಾರೆ ಎಂದುಕೊಂಡಿದ್ದೆ’ ಎಂದ!
ಈ ಥರದ ಮುಗ್ಧರಂತೆಯೇ ಪಠ್ಯಪುಸ್ತಕಗಳ ಮೂಲಕ ಮಾತ್ರ ದೊಡ್ಡ ಲೇಖಕ–ಲೇಖಕಿಯರನ್ನು ಓದಿದವರಿದ್ದಾರೆ. ಅದರಲ್ಲೂ ಬಾಲ್ಯದಲ್ಲಿ ಓದಿದ ಪಠ್ಯಗಳು ಮಕ್ಕಳಲ್ಲಿ ಸಾಹಿತ್ಯದ ಹಸಿವನ್ನು ಹೆಚ್ಚಿಸುತ್ತಿರುತ್ತವೆ. ನನ್ನ ಬಾಲ್ಯದಲ್ಲಿ ರಜೆಯಲ್ಲಿ ಓದಲು ಹೊಸ ಪುಸ್ತಕಗಳು ಸಿಗದೆ ಸೀನಿಯರ್ ವಿದ್ಯಾರ್ಥಿಗಳ ಕನ್ನಡ ಪಠ್ಯಗಳನ್ನೆಲ್ಲ ಓದಿಬಿಡುತ್ತಿದ್ದುದು ನೆನಪಾಗುತ್ತದೆ. ಅಲ್ಲಿ ಅಕಸ್ಮಾತ್ ಕಣ್ಣಿಗೆ ಬಿದ್ದ ಬೆಸಗರಹಳ್ಳಿ ರಾಮಣ್ಣನವರ ಕತೆಯಲ್ಲಿ ಹಳ್ಳಿಯ ಎಲ್ಲರಿಂದಲೂ ಕುರಿನಂಜ ಎಂದು ಕಿಚಾಯಿಸಿಕೊಳ್ಳುತ್ತಿದ್ದ ಮರಿನಂಜ, ಕತೆಯ ಕೊನೆಗೆ ‘ನಿಮ್ಮಪ್ಪ ಕುರಿನಂಜ’ ಎಂದು ರೇಗಿ ಕುಡಗೋಲು ಎತ್ತುವ ಭಾಗ ನನ್ನಲ್ಲಿ ಪುಳಕದ ಜೊತೆಗೆ ಬಂಡಾಯದ ಧೋರಣೆಯನ್ನೂ ಹುಟ್ಟಿಸಿಬಿಟ್ಟಿತ್ತು.
ಇಂಥ ಉದಾಹರಣೆಗಳು ಎಲ್ಲರ ಬದುಕಿನಲ್ಲೂ ಇರುತ್ತವೆ. ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿದ್ದ ಶಿವರಾಮ ಕಾರಂತರ ‘ನಮ್ಮ ಅಳತೆಯನ್ನು ಮೀರಲಾಗದ ದೇವರು’ ಎಂಬ ಲೇಖನ ಓದಿ ವಿಚಾರವಂತರಾದ ವಿದ್ಯಾರ್ಥಿಗಳಿದ್ದಾರೆ. ತಮ್ಮ ಭಾಷಾ ಪಠ್ಯದಲ್ಲಿ ಮೊದಲ ಬಾರಿಗೆ ಕತೆ, ಪದ್ಯ ಓದಿ ಬರವಣಿಗೆಯ ಕಲೆ ಕಲಿತವರಿದ್ದಾರೆ. ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಬಗೆಬಗೆಯ ಎನರ್ಜಿಗಳನ್ನು ಹೊರಚಿಮ್ಮಿಸುತ್ತಿರುತ್ತವೆ. ಆದ್ದರಿಂದ ಪಠ್ಯಪುಸ್ತಕ ರೂಪಿಸುವವರಿಗೆ ಹಾಗೂ ಬೋಧಿಸುವವರಿಗೆ ತಾವು ನಿಜಕ್ಕೂ ನಾಡು ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂಬ ಬಗ್ಗೆ ಆಳವಾದ ನಂಬಿಕೆ ಇರುವುದು ಒಳ್ಳೆಯದು. ಸಿನಿಕತನದಿಂದ ಯಾವ ಹೊಸತೂ ಹುಟ್ಟುವುದಿಲ್ಲ ಮತ್ತು ಇರುವ ಒಳ್ಳೆಯದೂ ನಾಶವಾಗುತ್ತದೆ ಎಂಬ ಸರಳ ಸತ್ಯವನ್ನು ನಾವು ಮರೆಯಬಾರದು.
ಇಂಥ ಉದಾಹರಣೆಗಳು ಎಲ್ಲರ ಬದುಕಿನಲ್ಲೂ ಇರುತ್ತವೆ. ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿದ್ದ ಶಿವರಾಮ ಕಾರಂತರ ‘ನಮ್ಮ ಅಳತೆಯನ್ನು ಮೀರಲಾಗದ ದೇವರು’ ಎಂಬ ಲೇಖನ ಓದಿ ವಿಚಾರವಂತರಾದ ವಿದ್ಯಾರ್ಥಿಗಳಿದ್ದಾರೆ. ತಮ್ಮ ಭಾಷಾ ಪಠ್ಯದಲ್ಲಿ ಮೊದಲ ಬಾರಿಗೆ ಕತೆ, ಪದ್ಯ ಓದಿ ಬರವಣಿಗೆಯ ಕಲೆ ಕಲಿತವರಿದ್ದಾರೆ. ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಬಗೆಬಗೆಯ ಎನರ್ಜಿಗಳನ್ನು ಹೊರಚಿಮ್ಮಿಸುತ್ತಿರುತ್ತವೆ. ಆದ್ದರಿಂದ ಪಠ್ಯಪುಸ್ತಕ ರೂಪಿಸುವವರಿಗೆ ಹಾಗೂ ಬೋಧಿಸುವವರಿಗೆ ತಾವು ನಿಜಕ್ಕೂ ನಾಡು ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂಬ ಬಗ್ಗೆ ಆಳವಾದ ನಂಬಿಕೆ ಇರುವುದು ಒಳ್ಳೆಯದು. ಸಿನಿಕತನದಿಂದ ಯಾವ ಹೊಸತೂ ಹುಟ್ಟುವುದಿಲ್ಲ ಮತ್ತು ಇರುವ ಒಳ್ಳೆಯದೂ ನಾಶವಾಗುತ್ತದೆ ಎಂಬ ಸರಳ ಸತ್ಯವನ್ನು ನಾವು ಮರೆಯಬಾರದು.
No comments:
Post a Comment